Sunday 30 October 2011

ನವಿಲೇಕೆ ಹಾಡಲಿಲ್ಲ ..?

                                     ನವಿಲೇಕೆ  ಹಾಡಲಿಲ್ಲ ..?    

 ಕಾಡಿನಲ್ಲಿ  ಒಮ್ಮೆ  ಸಾಂಸ್ಕೃತಿಕ  ಸಮ್ಮೇಳನವೇ  ನಡೆಯಿತು . ಅಲ್ಲಿ  ಸಿಂಹ , ಆನೆ, ಕುದುರೆ ,ಒಂಟೆ, ಇಲಿ, ಹಾವು, ಕಪ್ಪೆ , ಕೋಗಿಲೆ ,ನವಿಲು,  ನಾಯಿ, ಕೋತಿ  ಎಲ್ಲಾ ಪ್ರಾಣಿಗಳು  ಮೇಳೈಸಿದವು . ತಮ್ಮ ತಮ್ಮ ಪ್ರತಿಭೆಯನ್ನ  ಪ್ರದರ್ಶಿಸಲು  ನಿರ್ಧರಿಸಿದವು. ಸಿಂಹ ಘರ್ಜನೆಯನ್ನು  ಮಾಡದೆ  ತನ್ನ  ಗಾಂಭೀರ್ಯ ಹೆಜ್ಜೆಯನ್ನು ಹಾಕುತ್ತಾ  ಕೊರಳಲ್ಲಿರುವ  ಗರಿ ಗರಿ ಕೂದಲನ್ನು ಕೆದರುತ್ತಾ  ತನ್ನ ಝಳಕ್ಕನ್ನು  ತೋರಿಸುತಿತ್ತು.   ಆನೆ ತನ್ನ ಸೊಂಡಿಲನ್ನು ತಿರುಗಿಸುತ್ತಾ ತನ್ನ ತನ್ನದೇ ಭಂಗಿಯನ್ನು ತೋರಿಸಿತ್ತು,  ಇಲಿಯು  ಒಂದೇ ನಿಮಿಷದಲ್ಲಿ  ಜೇಡ ಕಟ್ಟಿದ  ಹತ್ತಾರು ಪದರದ ಬಲೆಯನ್ನ ತುಂಡರಿಸಿದ್ದನ್ನು  ಕಂಡು ಎಲ್ಲರೂ ವಿಸ್ಮಿತರಾದರು. ಒಂಟೆ ತನ್ನ  ಕತ್ತು ಮತ್ತು ಬೆನ್ನಿನಲ್ಲಿ ಥಳುಕನ್ನು ತೋರಿಸುತಿತ್ತು.  ಹಾವು ತನ್ನ ಹೆಡೆ ಎತ್ತಿ  ಬಾಲವನ್ನು ಸುಂದಿಸುತ್ತಾ  ಬಳ್ಳಿಯಂತೆ  ಆಕೃತಿ  ತಂದವು. ನಾಯಿ ಎಲ್ಲೋ ಹುದುಕಿಟ್ಟ  ಮಾಂಸದ ತುಂಡನ್ನ ಕ್ಷಣಾರ್ಧದಲ್ಲಿ  ತೋರಿಸಿಕೊಟ್ಟಿತು. ಕುದುರೆ  ತನ್ನ  ಬಾಲವನ್ನು   ಅಲ್ಲಾಡಿಸುತ್ತಾ ತಾಳಕ್ಕೆ  ತಕ್ಕಂತೆ ಓಡುತ್ತಾ ನರ್ತಿಸಿ ಎಲ್ಲರ ಮನಸೂರೆ ಗೊಳ್ಳುವಂತೆ  ಮಾಡಿತು. ಹೀಗೆ ಎಲ್ಲ ಪ್ರಾಣಿಗಳು  ತಮ್ಮ ತಮ್ಮ ಪ್ರತಿಭೆಗಳನ್ನು  ಒಂದಕ್ಕಿಂತ ಒಂದು  ಮಿಗಿಲು ಎಂಬಂತೆ ಪ್ರದರ್ಶಿಸಿದವು . ಕೊನೆಯ ಸರದಿ  ಕೋಗಿಲೆ ಮತ್ತು  ನವಿಲಿನದ್ದಾಗಿತ್ತು. ಕೋಗಿಲೆ ನವಿಲಿನಲ್ಲಿ " ತಾಕತಿದ್ದರೆ  ನೀನು ನನ್ನಂತೆ  ಹಾಡಿ ನನಗಿಂತ ಹೆಚ್ಚು ಚಪ್ಪಾಳೆ ಗಿಟ್ಟಿಸಬೇಕು" ಎಂದಿತು . ಬಹಳ ಇಂಪಾದ ಹಾಡನ್ನು ಕೇಳಿ  ಜೋರು ಚಪ್ಪಾಳೆ ಬಂತು. ಮುಂದಿನ ಸರದಿ ನವಿಲಿನದ್ದಾಗಿತ್ತು. ನವಿಲು ಸ್ವಲ್ಪ ಯೋಚಿಸಿ,   ಕೋಗಿಲೆ  ಹಾಡಿದ ತಾಳದಲ್ಲಿಯೇ  ತನ್ನ ಗರಿಯನ್ನು ಕೆದರಿ ಹಾಡುವುದರ ಬದಲಾಗಿ ಕುಣಿಯಲಾರಂಭಿಸಿತು.  ವಿವಿಧ ಭಂಗಿಯಲ್ಲ್ಲಿ  ನರ್ತಿಸಿತು  ಅದರ ನೃತ್ಯ  ಆಕರ್ಷಣೀಯವಾಗಿತ್ತು. ಸಮ್ಮೇಳನಕ್ಕೆ ಬಂದುದು ಸಾರ್ಥಕ ಎಂದು ಎಲ್ಲರೂ  ಮನದಲ್ಲೇ ಅಂದು ಕೊಂಡರು. ಸಾವಿರ ಕಣ್ಣಿ ನ  ನೃತ್ಯ ನೋಡಲು ನಮಗೆ ಎರಡೇ  ಕಣ್ಣು ಸಾಕೆ? ಎಂದು ಮನದಲ್ಲೇ ಮರುಗಿದರು.ನಾಟ್ಯ  ಮುಗಿದಂತೆ ಯಾರು ಚಪ್ಪಾಳೆಯನ್ನು  ತಟ್ಟಲಿಲ್ಲ......ಬದಲಾಗಿ  ಎಲ್ಲರೂ   "ಇನ್ನೊಮ್ಮೆ" " ಇನ್ನೊಮ್ಮೆ"   "ಇನ್ನೊಮ್ಮೆ"  ಎಂದು ಘೋಶವನ್ನು  ಹಾಕಿದರು.

ಇದನ್ನು ದೂರದಿಂದ  ನೋಡುತ್ತಾ ಗಮನಿಸುತಿದ್ದ.......

ಇಬ್ಬರು ವಿದ್ಯಾರ್ಥಿಗಳು: "ನಾನು  ಈ ವಿದ್ಯಾಲಯಕ್ಕೆ ಬರಲು ಕಾರಣ ನಿನ್ನನ್ನು   ನೋಡಿ ನಿನ್ನಂತೆ  ಆಗಬೇಕೆಂದು, ನಾನೂ ಅಷ್ಟೇ  ನನ್ನ  ಅಣ್ಣ  ಯಾವುದನ್ನು  ಆರಿಸಿದ್ದಾನೋ ಅದೇ ವಿಷಯವನ್ನ  ಆರಿಸಿದ್ದೇನೆ  ! "

ಇಬ್ಬರು ವ್ಯಾಪಾರಿಗಳು:   "ನಾನು ಈ ವ್ಯಾಪಾರ ಮಾಡಲು ಕಾರಣ ನೀನು ,ಏಕೆಂದರೆ ನಿನ್ನ ವ್ಯಾಪಾರ ತುಂಬಾ ಲಾಭದಾಯಕದಾಗುತಿತ್ತು ;  ನಾನೂ ಅಷ್ಟೇ  ನನ್ನ ತಂದೆ ಮಾಡಿದ ವ್ಯಾಪಾರನೇ ಮಾಡ್ತಾ ಇದ್ದೀನಿ ! ". 

ಇಬ್ಬರು ಕೃಷಿಕರು: " ನೀನು  ಯಾವ ಕೃಷಿ ಮಾಡ್ತಾ ಇದ್ದಿಯೋ  ಅದೇ ಕೃಷಿಯನ್ನ ನೋಡಿ ನಾನೂ ಮಾಡ್ತಾ ಇದ್ದೀನಿ,;;ನಾನೂ ಅಷ್ಟೇ ಮುತ್ತಾತ ಮಾಡಿದ ಕೃಷಿಯನ್ನೇ  ಮಾಡ್ತಾ ಇದ್ದೀನಿ. !"

 ಗೆಳತಿಯರು: ನೀನು  ಹಾಗೆ ಸಿಂಗಾರ ಮಾಡಿದಿ ಎಂದು ನಾನೂ ಕಲಿತೆ......,

ತಂತ್ರಜರು: ನೀನು  ಆ ತಂತ್ರಜ್ಞಾನ  ಬಳಸಿದಿ ಎಂದು ನಾನೂ  ಅದೇ ತಂತ್ರಜ್ಞಾನ ಉಪಯೋಗಿಸಿದ್ದೀನಿ ....!!!

ಹೀಗೆ  ನಮ್ಮೊಳಗೇ  ಪ್ರತಿ ,ಅದರ ಅನು ಪ್ರತಿ , ಮರು ಪ್ರತಿ,ಗೆ   ತಿರು ಪ್ರತಿ,  ಯಾದಾಗ  ಸ್ವಾಭಾವಿಕವಾಗಿ ಪ್ರಗತಿಯಲ್ಲಿ  ಕುಂಠಿತ    ರಾಗುತ್ತೀವೇನೋ ..? ಸ್ಪರ್ಧೆಗೆ ಅವಕಾಶವನ್ನ  ಕಲ್ಪಿಸುತ್ತದೆಯೇ ಹೊರತು  ವಿಕಾಸ ಅಥವಾ ವೈವಿದ್ಯತೆಗೆ ಅಲ್ಲ. ಜೀವಿಗಳೆಲ್ಲಾ ಭೂಮಿಯವಸ್ತುವೇ.. ಪ್ರತಿಯೊಂದಕ್ಕೂ ಅದರದೇ ಆದ ಗುಣ ಶಕ್ತಿ ಇದೆ!
 "ವಜ್ರ ಆಕರ್ಷಿಸುವುದು ಅದರ ಪ್ರಜ್ವಲಿಸುವಿಕೆ ಯಿಂದ, ಅಯಸ್ಕಾಂತ  ಆಕರ್ಷಿಸುವುದು  ಅದರ ಗುರುತ್ವ ದಿಂದ !"  ಕೋಟಿ ಮೌಲ್ಯ ಇರುವ  ವಜ್ರ  ಚಿಕ್ಕ ಹುಡುಗನಿಗೆ  ಬೇಡ  ಅದು ಶೂನ್ಯ  ,ಅಯಸ್ಕಾಂತ ಕೆಳಗೆ ಬೀಳುವುದಿಲ್ಲ  ಎಂದು  ಕಬ್ಬಿಣದ  ಕಿಟಕಿಯಲ್ಲಿ ಜಾದೂ  ಮಾಡುತ್ತಾ ಇರುತ್ತಾನೆ . ಒಪ್ಪ  ಗೆಳತಿಗೆ ವಜ್ರ ತೋರಿಸಿ  ಅಯಸ್ಕಾಂತ  ಬರೀ ಶೂನ್ಯ. ತನ್ನ ಸೌಂದರ್ಯ ಮತ್ತು  ವಜ್ರದಲ್ಲಿ ಜಾದೂ ಮಾಡುತ್ತಾ ಇರುತ್ತಾಳೆ !

ತಾಕತಿದ್ದರೆ ನನ್ನಂತೆ  ಹಾಡು ಎಂದು ಕೋಗಿಲೆ ಸವಾಲೆಸೆದಾಗ ನವಿಲು ಕೋಗಿಲೆಯಂತೆ ಆಗಲು ಹೊರಟಿಲ್ಲ,  ಇಲ್ಲದ ತಾಕತ್ತನ್ನ  ತೋರಿಸಲು ಹೋಗಿಲ್ಲ ಇರುವ ತಾಕತ್ತಿನಲ್ಲಿ ರಂಜಿಸಿತಲ್ವೆ..?   ನವಿಲು  ಮತ್ತೊಮ್ಮೆ  ನಾಟ್ಯವಾಡಿತು.


Thursday 27 October 2011

' ಗೊಂಜೇಲ ' ರ ಕಂಡಿರಾ ..?

                                  '  ಗೊಂಜೇಲ ' ರ   ಕಂಡಿರಾ ..?

 ಕಾಮತ್ ಜಾತಿಯವರ ಹೋಟೆಲ್ ನಲ್ಲಿ ರುಚಿಯಾದ ಊಟವನ್ನ ಉಂಡಿದ್ದೀವಿ, ಗತ್ತು  ಇರುವ ಶೆಟ್ಟಿ ಜಾತಿಯವರನ್ನು ಕಂಡಿದ್ದೀವಿ, ಶಾಲು ಹಾಕಿ ಕೊಂಡು ಗ್ರಾಮದಲ್ಲಿರುವ  ಗೌಡರನ್ನ ನೋಡಿದ್ದೀವಿ, ಪೂಜೆ ಮಾಡುವ ಬ್ರಾಹ್ಮಣ ಜಾತಿಯನ್ನ ನೋಡಿದ್ದೀವಿ, ಲಾಭದಾಯಕವಾಗಿ  ವ್ಯಾಪರಮಾಡುವ ಮುಸಲ್ಮಾನ ಜಾತಿಯವರಲ್ಲಿ ವ್ಯಾಪಾರ ಮಾಡಿರುತ್ತೀವಿ,  ಕ್ರಿಶ್ಚ್ಯನ್  ಜಾತಿಯವರಿಂದ   ಶಾಂತಿ ಮಂತ್ರ ವನ್ನ ಕೇಳಿರುತ್ತೀವಿ ,...ಹೀಗೆ ಹಲವಾರು  ಜಾತಿ ,ಜಾತಿಯೊಳಗೆ  ಐನೂರ ಎಂಟು  ಜಾತಿ, ಅದರಲ್ಲಿ ಮುನ್ನೂರ ಎಂಟು ಉಪಜಾತಿ,  ಆಯಾಯ ಜಾತಿಗಳಲ್ಲಿ ವಿವಿಧ ಕ್ರಮಗಳು.

 ' ಗೊಂಜೇಲ '  ಎಂಬ ಜಾತಿಯನ್ನ ಕೇಳಿದ್ದೀರಾ? ನೋಡಿದ್ದೀರಾ?  .....ಕೇಳಿ, ಇವರು ಅಲ್ಪ  ಸಂಖ್ಯಾತರು ಅಲ್ಲ,ಬಹುಸಂಖ್ಯಾತಾರೆ  ಆಗಿರುತ್ತಾರೆ!   ಇವರು ಯಾವುದೋ ಬುಡಕಟ್ಟು ಜನಾಂಗದವರಾಗಿರುವುದಿಲ್ಲ , ನಮ್ಮ ಓರಗೆಯವರೇ, ಬಂಧುಗಳೇ ,ನಮ್ಮೊಂದಿಗೆ ಕಲಿಯುವವರೇ, ನಮ್ಮೊಂದಿಗೆ ಹಾಸ್ಟೆಲ್ ನಲ್ಲಿರುವವರೇ, ನಮ್ಮೊಂದಿಗೆ ಉದ್ಯೋಗ ಮಾಡುವವರೇ, ನಮ್ಮ ಆಸಕ್ತಿ, ಹವ್ಯಾಸಿಗರೇ ಆಗಿರುತ್ತಾರೆ.

"ಒಮ್ಮೆ ಸೂಜಿ  ಕೊಡುತ್ತೀರಾ..? ಮುಳ್ಳು ತೆಗೆದ ತಕ್ಷಣ  ನಾಳೆ  ಒಳಗೆ ಕೊಡುತ್ತೀನಿ " " ನಿಮ್ಮಲ್ಲಿ  ಆ ಪುಸ್ತಕ ಇದಿಯಲ್ಲಾ.. ಪುಸ್ತಕ ಓದಿ ನಂತರ ವಾಪಾಸ್ ಮಾಡುತ್ತೀನಿ" "ಪರೀಕ್ಷೆ  ಕಳೆದು  ಗೈಡು  ಪುಸ್ತಕ  ವಾಪಾಸ್ ಮಾಡುತ್ತೀನಿ "      " ನಾನೂ ಸಂಕರ್  ನಾಗ್  ಫ್ಯಾನು  ಅವನದ್ಯಾವುದಾದ್ರು  CD   ಐತಾ ..? ಸಿನಿಮಾ ನೋಡಿ ವಾಪಾಸ್ ಕೊಟ್ಬಿಟ್ಟೆ "   "ಸಂಜೆಯೊಳಗಾಗಿ   ಸ್ಕ್ರೂ  ಹಾಕಿ  ಕಟ್ಟಿಂಗ್ ಪ್ಲೇಯರ್ ,ಸ್ಕ್ರೂ ಡ್ರೈವರ್  ವಾಪಸ್ ಮಾಡುತ್ತೀವಿ"  "ನೈಲ್ ಪಾಲಿಶ್ ಹಾಕಿ ತಕ್ಷಣ ವಾಪಸ್ ಮಾಡ್ತೀನಿ..."
 ಹೀಗೆ  ಒಮ್ಮೆಗೆ  ಎಂದು ನಮ್ಮ ಕೈಯ್ಯಿಂದ  ತಗೊಂಡು  ಹೋದ  ವಸ್ತು ಅವರದ್ದೇ  ಆಗಿರುತ್ತದೆ! ಇದು ಮುಂದೆ ಹೀಗೆ ಆಗಬಹುದು ಎಂದು ನಮಗೂ ಗೊತ್ತಿರುತ್ತದೆ  ಆದರೆ ದಾಕ್ಷಿಣ್ಯಕ್ಕೆ ಸಿಕ್ಕಿಕೊಂಡು ಕೊಟ್ಟುಬಿಡುತ್ತೇವೆ. ನಾವು ಕೊಟ್ಟಿಲ್ಲ ಅಂದ್ರೆ  ನಮ್ಮದೇ ತಪ್ಪು ಎಂದು ನಮ್ಮ ವಠಾರದಲ್ಲಿ  ರಾದ್ಧಾಂತ ಮಾಡಿರುತ್ತಾರೆ. ಅವರಿಗೆ ಉಪಯೋಗವಾದಮೇಲೆ ವಾಪಾಸ್ ಮಾಡುತ್ತೀರಾ ಎಂದು ಕೇಳಿದೇವಾ  ಅಲ್ಲೂ    ಇವನಲ್ಲಿ ಇನ್ನುಮುಂದೆ ಯಾರೂ  ಕೇಳಲೇ  ಬೇಡಿ  ಎಂದೂ  ರಾದ್ಧಾಂತ  ಮಾಡುತ್ತಾರೆ. ಇವರು ಅನುಕೂಲಸ್ತರಲ್ಲದವರಲ್ಲ, ಅನುಕೂಲಸ್ತರೆ ಆಗಿರುತ್ತಾರೆ. ನೆನಪಿಡಬೇಕಾದದ್ದು ಇದು ನಮಗೆ ಮುಳ್ಳು ಚುಚ್ಚಿದಾಗ  ಅವರಲ್ಲಿ  ಸೂಜಿ ಏನು  ಸಲಾಕೆ , ಐಪಾಡ್  ಗಳೇ ಇರುತ್ತವೆ, ಆದರೆ ಅವುಗಳಿಂದ  ನಮ್ಮ ಮುಳ್ಳು  ತಗೆಯೋಕೆ ಆಗುವುದಿಲ್ಲ . ಕೊನೆಗೆ ಅದೇನು ಮಹಾ ಕೋಟಿ ರೂಪಾಯಿದಾ..? ಅಂತಲೂ ಉಸುಬುತ್ತಾರೆ. ನಮಗೆ ಬೇಕಾದ ಸೂಜಿ ಕೊಳ್ಳಲು , ಬೇಕಾದ ಪುಸ್ತಕ ತಗೊಳ್ಳಲು ,ಬೇಕಾದ ಸಿ ಡಿ ತಗೊಳ್ಳಲು ,ಕೋಟಿಗಿಂತಲೂ  ಹೆಚ್ಚಾದ  ಹುಡುಕಾಟ ಮಾಡಿರುತ್ತೀವಿ, ಸಮಯ ಕಳೆದಿರುತ್ತವೆ, ಆದರೆ ಅವರ    ' ಗೊಂಜೇಲು '   ತನಕ್ಕೆ     ಇದೆಲ್ಲವೂ ನಗಣ್ಯ, ಯಾವುದೂ ಕಾಣಿಸುವುದಿಲ್ಲ  ..

ಚಹಾ ಕುಡಿಯಲು ಒಟ್ಟಿಗೆ ಬಂದಿರುತ್ತಾರೆ, ಜೈಕಾರ  ಹಾಕಿಕೊಂಡು  ನಮ್ಮಲ್ಲೇ  ಇರುತ್ತಾರೆ, ಮದುವೆ ದಿಬ್ಬಣಕ್ಕೂ   ಊಟಕ್ಕೂ ಬಂದಿರುತ್ತಾರೆ..ಆದರೆ..;
ಇನ್ನೊಬ್ಬರಿಗೆ ಉಪಟಳ ಕೊಟ್ಟು ,  ತಗೊಂಡದನ್ನ  ಹಿಂದುರುಗಿಸದ, ರಾದ್ದಾಂತ ವನ್ನೇ ಇಷ್ಟ ಪಡುವ  ಗೊಂಜೇಲು ತನಕ್ಕೆ ದಿಕ್ಕಾರವಿರಲಿ, ಅವರೊಂದಿಗೆ ದಾಕ್ಷಿಣ್ಯದ  ಮಾತೇ    ಬೇಡ. ನಿಮ್ಮೊಂದಿಗೆ ಜೈ ಕಾರ ಹಾಕಲಿಲ್ಲ ಎಂದು  ನೀವು ಬೇಜಾರು ಪಡುವುದಿಲ್ಲ, ಮದುವೆ ದಿಬ್ಬಣಕ್ಕೆ ಬಂದು ಉಣದೆ ಇದ್ದರೂ ಚಿಂತೆಯಿಲ್ಲ, ನಿಮ್ಮೊಂದಿಗೆ  ಚಹಾ ಕುಡಿಯಲು ಒಟ್ಟಿಗೆ  ಬಂದಿಲ್ಲವಲ್ಲಾ  ಎಂಬ ತುಡಿಕೆಯಿಲ್ಲ. ಅವರು ಗೊಂಜೇಲು ತನವನ್ನ ಬಿಟ್ಟರೆ  ಅಷ್ಟೇ  ಸಾಕಲ್ವೆ..ಅದೇ ದೊಡ್ಡ ನೆಮ್ಮದಿ ಆಲ್ವಾ..?

ನನ್ನಲ್ಲಿರುವ  ಗೊಂಜೇಲು ತನಕ್ಕೆ  ಹಠಾವೋ  ಚಳುವಳಿ  ಇವತ್ತೇ ಶುರು  ಹಚ್ಕೊಂಡಿದ್ದೀನಿ....ನೀವು..?




Saturday 22 October 2011

ನೈಪುಣ್ಯತೆಯನ್ನು ಅರಸುತ್ತಾ....

                                          ನೈಪುಣ್ಯತೆಯನ್ನು  ಅರಸುತ್ತಾ....  

ನಾನು  ನನ್ನ ಡೊಮೈನ್ ಬದಲಾಯಿಸುತ್ತೀನಿ, ಇರುವ ಉದ್ಯೋಗವನ್ನು ಬಿಟ್ಟು  ಬೇರೊಂದನ್ನು ನೋಡುತ್ತೀನಿ, ಈ ಕೆಲಸ ನೆಟ್ಟಗಿಲ್ಲ ನೆಟ್ಟಗಿರೋದನ್ನು ಆರಿಸುತ್ತೀನಿ. ಹೀಗೆ ಇರುವ ಜಾಗದಲ್ಲಿ ,ಇರುವ ಕೆಲಸಗಳಲ್ಲಿ ,ಮಾಡುವ ಕಾರ್ಯಗಳಲ್ಲಿ  ದಿನೇ ಅಲವತ್ತು ಕೊಳ್ಳುವುದನ್ನು  ರೂಡಿ ಮಾಡಿಕೊಂಡಿರುತ್ತೀವಿ.
ನೀವು ಶೇವಿಂಗ್  ಮಾಡಿಸಲು ಹೋದಾಗ  ಯಾವಾಗಲು ನಿಮ್ಮನ್ನ ಶೇವು  ಮಾಡುವವನ ಹೊರತು ಇನ್ನೊಬ್ಬ ಮಾಡಲು ಹೊರಟರೆ ಯಾಕೋ ಮನಸು ಒಪ್ಪಲ್ಲ,ಹುಬ್ಬು ಕಟ್  ಮಾಡಿಸಲು, ವ್ಯಾಕ್ಸಿಂಗ್ ಮಾಡಿಸಲು  ಹೋಗುವ ನಿಮ್ಮ ಗಟ್ಟಿಗೆತ್ತಿ ಗೆಳತಿಯರಲ್ಲಿ ,ಅಕ್ಕ ತಂಗಿಯರಲ್ಲಿ ಅವರು ಹೋಗುವುದಕ್ಕಿಂತ  ದೊಡ್ಡ ಬ್ಯೂಟಿ ಪಾರ್ಲರ್ ಗೆ ಹೋಗಲು ಸಲಹೆ ಕೊಡಿ ಆಗ ಅವಳು ಒಪ್ಪಲ್ಲ ತನಗೆ ಇಷ್ಟ ವಾಗುವಂತೆ ಚೆನ್ನಾಗಿ   ಮಾಡುವ ಸಣ್ಣ ಪಾರ್ಲರ್ಗೆ ಹೊಗುತ್ತಾಳೆಯೇ ಹೊರತು ಇಷ್ಟವಿಲ್ಲದ ದೊಡ್ಡ ಪಾರ್ಲರ್ಗೆ ಹೋಗುವುದಿಲ್ಲ .ಕಾರಣ ಇಷ್ಟೆ ಸಲೂನ್ / ಬ್ಯೂಟಿ ಪಾರ್ಲರ್ ನವರ ನೈಪುಣ್ಯತೆ . ಅವರು ಹೇಗೆ ಇರಲಿ  ಅವರ ನೈಪುಣ್ಯತೆಗೆ  ನಮಗೆ ಗೊತ್ತಿಲ್ಲದಂತೆ  ನಾವು ಗೌರವ  ಕೊಡುತ್ತೇವೆ .  ಅದು  ಎಂದಿಗೂ  ಬಲವಂತವಾಗಿ  ಪಡೆದದ್ದೂ ಆಗಿರುವುದಿಲ್ಲ . ಅವರ ಮೌಲ್ಯವನ್ನು  ಹೆಚ್ಚಿಸಿರುವುದು  ಅವರ ನೈಪುಣ್ಯದಿಂದಲೇ ! ಗಾಡಿಯ ಶಬ್ದ ಕೇಳಿಯೇ  ಯಾವ ಪಾರ್ಟ್ ಸರಿಪಡಿಸಬೇಕೆಂದು  ಒಳ್ಳೆಯ ಫಿಟ್ಟರ್  ಪತ್ತೆಹಚ್ಚ್ಚಿರುತ್ತಾನೆ ,  ಬಟ್ಟೆಯನ್ನು  ನೋಡಿ  ಎಲ್ಲಿ ಹೊಲಿಗೆ  ಸರಿಯಾಗಿಲ್ಲ ಎಂಬುದನ್ನ  ಪಳಗಿದ ಟೈಲರ್ ಹೇಳಿರುತ್ತಾನೆ ,ಮನೆಯ  ಭೀಮು ಹೀಗೇನೆ  ನಿಲ್ಲಿಸ ಬೇಕಿತ್ತು ಎಂದು ಪರಿಣತಿ ಹೊಂದಿದ ಮೇಸ್ತ್ರಿ  ಹೇಳಿರುತ್ತಾನೆ.  ಇನ್ನೂ ಹುರಿಯಬೇಕಿತ್ತು  ಎಂದು ಅಡುಗೆ ಭಟ್ರು ಹೇಳಿರುತ್ತಾರೆ.
ಮೇಸ್ತ್ರಿಗಾಗಲಿ ,ಟೈಲರಿಗೆ, ಫಿಟ್ಟರ್ ಗೆ , ಕ್ಷೌರಿಕನಿಗೆ  ಇನ್ನು ಯಾರೇ ಆಗಿರಲಿ  ನೈಪುಣ್ಯತೆ  ಗಾಳಿಯಲ್ಲಿ ಹಾಗೆ  ತೇ ..ವ..ಲಿ..ಸಿಕೊಂಡು ಬಂದಿರುವುದಿಲ್ಲ . ಕೆಲಸದಲ್ಲಿನ ಒಂಚೂರು ಹೆಚ್ಚಿನ ಶ್ರದ್ಧೆ , ಅಚ್ಚುಕಟ್ಟುತನ , ಪೂರೈಸುವಿಕೆ, ಅದೆಲ್ಲೋ ಹಿಂದಿನ ಅನುಭವದ ಜ್ಞಾಪಕ, ಇನ್ನೊಬ್ಬನಿಗೆ ಹೀಗಾಗಿದೆ ಎಂಬ ತಿಳುವಳಿಕೆ, ಕ್ರಿಯಾಶೀಲತೆ  ಇದೆಲ್ಲದರ ಪರಿಣಾಮವಾಗಿ ಅವನ ಸಾಮರ್ಥ್ಯದಲ್ಲಿ ಕೌಶಲ ತುಂಬಿರುತ್ತದೆ . ಕೌಶಲ್ಯತೆಯಿಂದ  ಮಾಡಿದ ಕೆಲಸ ಅವನಿಗಲ್ಲದೆ  ಎಲ್ಲರಿಗೂ ಸಂತೋಷವಾಗುತ್ತದೆ.ಅದಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಆಕರ್ಷಿಸುತ್ತದೆ.   ಆ ಕೆಲಸವನ್ನು  ಅಚ್ಚುಕಟ್ಟಾಗಿ  ಮಾಡಿದ ತೃಪ್ತಿ ಸಿಗುತ್ತದೆ .
 ಅದು ಇವತ್ತಿನಿಂದ ನಾಳೆಗೆ  ತಕ್ಷಣವಾಗಿ  ಬಂದಿರುವುದಿಲ್ಲ  ಎಷ್ಟೋ ಪ್ರಯತ್ನಗಳನ್ನ ತಿಂದಿರುತ್ತದೆ. ನಮ್ಮ ಇತರೆ ಆಸಕ್ತಿಗಳನ್ನ ಮುಟ್ಟುಗೋಲು ಹಾಕಿರುತ್ತದೆ, ಇತರೆ ಕೆಲಸಗಳ ಪ್ರಾಮುಖ್ಯತೆಯನ್ನ ಕಡಿಮೆ ಮಾಡಿರುತ್ತದೆ. ನಮ್ಮನ್ನ ಆ ಕೆಲಸ ಅಳವಡಿಸಿಕೊಂಡಿರುತ್ತದೆ, ಗುರುಟಿಸಿರುತ್ತದೆ. ನಮ್ಮ ಇತರ ಎಷ್ಟೋ ಆಸೆಗಳನ್ನ ಒಣಗಿಸಿರುತ್ತದೆ.
ನಮ್ಮನ್ನ  ಅಳವಡಿಸಿಕೊಂಡಿರದ , ಪ್ರಾಮುಖ್ಯತೆಗಳಿಗೆ ಕಡಿವಾಣ ಹಾಕದ, ಪ್ರಯತ್ನಗಳನ್ನೇ ತುಂಬದ ,ಇತರ ಆಸೆಗಳಿಂದಲೇ ಬೆಳೆಸಿದ, ಒಂದು ಕೆಲಸದಲ್ಲಿ  ಸ್ವಲ್ಪ ಹೆಚ್ಚಿಗೆ ಗುರುಟಿಸಿ ಕೊಳ್ಳದ  ನಮ್ಮ ಬದುಕನ್ನ ಯಾರೂ ಗುರುತಿಸದಾಗುತ್ತಾರೆ. ವಿದ್ಯೆ ಇದ್ದರೂ ಕೌಶಲ ವಿರುವುದಿಲ್ಲ.ವಿದ್ಯೆಗೆ ವಿದ್ಯಾಲಯಗಳಿವೆ ಬಹುಷಃ  ಕೌಶಲಕ್ಕೆ ವಿಶ್ವವೇ ವಿದ್ಯಾಲಯವೇನೋ..?  

ಜ್ವರ  ಬಂದರೆ  ಮೆಡಿಕಲ್ ಗೆ ಹೋಗಿ ಕ್ರೋಸಿನ್ ತಗೊಳ್ಳುತ್ತೀವಿ , ಪ್ರೆಶರ್ ಕುಕ್ಕರ್ ಬೇಕಾದರೆ ಗಿರಿಯಾಸ್ ಗೆ ದೌಡಾಯಿಸುತ್ತೀವಿ, ಬಾಯಾರಿಕೆಯಾದರೆ ಕೊಕ್ ತಗೊಂಡು  ದಣಿವಾರಿಸುತ್ತೀವಿ, ಸೀರೆ ಬೇಕಾದರೆ  ಕಾನ್ಚೀವರಂ ಟಕ್ಸ್ ಟೈಲ್ಸ್ ನಲ್ಲಿ ಬೇಕಾದಷ್ಟು ಮಳಿಗೆಗಳಿವೆ.
     
ನೈಪುಣ್ಯತೆ ಅನ್ನೋದು  ಮೇಲೆ ಹೇಳಿದಂತೆ  ತಕ್ಷಣ  ಒಂದೇ ಕಡೆಯಲ್ಲಿ  ಸಿಗುತ್ತದೆಯಂತಾದರೆ ನನಗೆ ತಿಳಿಸಲು ಮರೆಯದಿರಿ ......... ಅಲ್ಲಿಗೆ  ದೌಡಾಯಿಸಲು  ಕಾತುರನಾಗಿದ್ದೇನೆ.

Thursday 20 October 2011

KP Nettar 's " ಕರ್ಣ ಭಾರತ "

                                                 KP  Nettar 's 
     
                                    " ಕರ್ಣ  ಭಾರತ "

ಗದಗಿನ  ವೀರ  ನಾರಣಪ್ಪ (ಕುಮಾರವ್ಯಾಸ ) ಮಹಾಭಾರತವನ್ನ   ಭಟ್ಟಿಇಳಿಸಿ  ನಮಗೆಲ್ಲ  ರಕ್ತಗತ ವಾಗುವಂತೆ ಮಾಡಿದ .ಅವನ  ಕಾವ್ಯದಲ್ಲಿ  ನಮಗೆಲ್ಲ ಚೈತನ್ಯ ತುಂಬಿಸುವ  ಶಕ್ತಿ ಇದೆ ಇನ್ನು ಓದುವ ಎನ್ನುವ ಕೌತುಕವಿದೆ ,ನೋವಾಗುವಾಗ ಬೇಕಾಗುವ  ಸಾಂತ್ವಾನ  ಇದೆ ,ಜೀವನದುದ್ದಕ್ಕೂ ಬೇಕಾಗುವ ಉಪಾಯಗಳಿವೆ ,ಶೃಂಗಾರವಿದೆ ,ರಸಿಕರಿಗೆ ರಸಗಳಿವೆ ,ಶಾಸ್ತ್ರಜ್ಞರಿಗೆ  ಶಾಸ್ತ್ರಗಳಿವೆ ,ತರ್ಕಗಳಿವೆ ,ಉಲ್ಲಾಸವಿದೆ ,ಮೇಲಾಗಿ ಕರ್ನಾಟಕ ದಲ್ಲಿ ಭಾರತ  ಇದೆ!
 KP Nettar 's  ಗಣಕೀಕೃತ   ಅಕ್ಷರವಷ್ಟೆ  !!

 ಧರೆ ನೆನೆದ  ದುಷ್ಕ್ರುತವ ದೇನೆಂ
 ದರಸ ಬೆಸಗೊಂಬೈ  ನಿರಂತರ
 ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
 ಹರಿವ ಬಿಂಕದ ರಥದ ಗಾಲಿಯ
 ಗರುವತನ  ಗಾಳಾಯ್ತಲೇ ಖೋ
 ಪ್ಪರಿಸಿತು ತಗ್ಗಿತು ತೇರು ತಡೆದುದು ಭಟನ  ಸಾಹಸವ

ಸಂಜಯ : ಎಲೈ  ಧೃತರಾಷ್ಟ್ರ ಭೂಪಾಲ  ಕೌರವೇಶ್ವರನ  ಧರೆಗೆಂದೇ  ತನ್ನ ಜೀವನವನ್ನು ಮುಡಿಪಾಗಿಸಿದ  ವೀರ  ಕರ್ಣ ನಿಗೆ  ಆ ಧರೆಯೇ   ಅಪಹಾಸ್ಯ ಮಾಡಿ  ಕಂಠಕವನ್ನು  ತಂದ  ಪರಿ ಕೇಳು .ಸವ್ಯ ಸಾಚಿಯಾದಂತಹ ಗಾಂಢೀವಿ ಏಕ ಕಾಲದಲ್ಲಿ  ಒಂದೇ ಬಾಣದಿಂದ  ಹಲವು ಗುರಿಯನ್ನಾಗಿಸಿದ್ದ . ಮಾತ್ರವಲ್ಲದೆ  ಏಕ ಕಾಲದಲ್ಲಿ ಹಲವು ಬಾಣಗಳಿಂದ ಒಂದೇ ಗುರಿಯನ್ನಾಗಿಸಿ   ಬೇಧಿಸಿದ್ದ . ಆದರೆ ಇದೆಲ್ಲವೂ ಕರ್ಣನ  ವೀರತನಕ್ಕೆ  ನಿರಾಯಾಸವಾಯಿತು. ಏಕಕಾಲದಲ್ಲಿ ವೈರಿಗಳ   ಕೆಲವು ಶರಗಳನ್ನೇಕೆ . ಸಹಸ್ರ ಶರಗಳನ್ನು ತುಂಡರಿಸುವ  ಚಾಣಾಕ್ಷತೆಯನ್ನ ತೋರಿದ . ಜಗದ್ಗುರು  ಪರಶುರಾಮರೆ ಬಂದು  ಹೋರಾಡುತ್ತಿದ್ದಾರೆ ಎಂಬಂತೆ ಬಾಸವಾಗುತ್ತಿತ್ತು. ಗ್ರಹಣವಾದಾಗ ಹೇಗೆ ಸೂರ್ಯ ರಶ್ಮಿಗಳು ಮಂಕಾಗುವುದೋ  ಹಾಗೆಯೇ  ಅರ್ಜುನನ ಬಾಣಗಳು ಮಂಕಾಗತೊಡಗಿದವು . ಸೂರ್ಯದೇವ  ತನ್ನ ರಶ್ಮಿಗಳನ್ನ ಕರ್ಣದೇವನಿಗೆ ಮಾತ್ರ ಕೊಟ್ಟು ತಾರತಮ್ಯ ಮಾಡುವಂತೆ ಭಾಸವಾಗುತ್ತಿತ್ತು . ಭೀಮನ ಗರ್ವ ಭಂಗ ಕರ್ಣನ ಸಾರಥ್ಯದಲ್ಲೇ ನಡೆಯಿತು . 
ಈ ಭೀಕರ ಬಾಣಗಳಿಂದ  ರಕ್ತಗಳ ಒರತೆಯೇ ಶುರುವಾದವು . ಕೌರವೇಶ್ವರ  ಅಥವಾ ಧರ್ಮರಾಜ ಇನ್ನು ಸ್ಮಶಾನಕ್ಕೆ ರಾಜ ಎಂದು  ಭಟರ  ಮಡದಿಯರು  ಕಿರುಚಾಡುತಿದ್ದರು. ಗಂಗೆಯಲ್ಲಿ ನೀರಿನ ಬದಲು ರಕ್ತ ಹರಿದರೆ ಹೇಗೋ ಹಾಗೆ ಕುರುಕ್ಷೇತ್ರದಲ್ಲಿ ಆಯಿತು. ಮಹಾರಾಜ,  ಗ್ರಹಣವು ಸೂರ್ಯನ ಕಿರಣಗಳನ್ನ  ಹೇಗೆ ಕ್ಷಣಿಕ ಕಾಲಕ್ಕೆ ಮಾತ್ರ  ಮಂಕಾಗಿಸುವುದೋ ಹಾಗೆ  ಅರ್ಜುನದೇವನನ್ನ ಮಂಕಾಗಿಸಿದ್ದು  ಕ್ಷಣಿಕಕ್ಕೆ  ಮಾತ್ರವಪ್ಪ ...
ಭಟರ ಮಡದಿಯರ  ಶಾಪವೋ , ಧರೆಗೆ ಕರ್ಣನ  ರಥದ ಗಾಲಿಗೆ ನೋವಾಗದಿರಲಿ ಎಂಬ  ಅನುಕಂಪವೋ,ಕರ್ಣನ ರಥ ಇರುವ ಭುವಿ  ಮೃದು ಹಾಸಿಗೆಯಂತೆ ಜೌಗು ಆಗತೊಡಗಿತು .ಕರ್ಣ ಇನ್ನೇನು  ಅರ್ಜುನನನ್ನು  ಗೆಲುವನು  ಎಂಬ ಸಂದರ್ಭದಲ್ಲಿ ಹೀಗಾಗಬೇಕೆ ?ರಥವು ವಾಲಿದವು ..ಕುದುರೆಗಳು ಡೊಂಕ ಹಾಕಲು  ಶುರುಮಾಡಿದವು. ಧರೆಗೆ ಕರ್ಣನನು  ಸೂರ್ಯ ರಶ್ಮಿ ಗಳನ್ನು ಹೀರಿದ ಕಮಲದಂತೆ ಕಂಡನು .ಆದ್ದರಿಂದ  ರಥದ  ಸುತ್ತ ಮುತ್ತಲೂ ಕೆಸರಾಯಿತು .ಯುದ್ಧದ ರಥ ಉಳುವ ನೇಗಿಲಾಯಿತು  . ಕರ್ಣ ತನ್ನ ಧನುಸ್ಸನ್ನು  ರಥದಲ್ಲಿ ಮಡಗಿ ,ರಟ್ಟೆಗಳಲ್ಲಿರುವ  ಶಕ್ತಿಯನ್ನೆಲ್ಲ    ಗಾಲಿಯನ್ನು ಕೆಸರಿನಿಂದ ತೆಗೆಯಲು ಪ್ರಯೋಗಿಸಿದನು, . ಮರು ಪ್ರಯತ್ನವನ್ನ ಮಾಡಿದನು ರಥವು ಸ್ವಲ್ಪ ಅಲುಗಾಡಿತಾದರೂ ಮೇಲೇರದ್ದನ್ನು ಕಂಡು ತನ್ನಲ್ಲಿರುವ ಎಲ್ಲಾ ಶಕ್ತಿಯನ್ನು ಪ್ರಯೋಗಿಸಿದನು ಇನ್ನೇನು ಮೇಲೆ ಬರುತ್ತದೆ ಎಂದು ಸಂತಸ ಪಟ್ಟನು ಕೌರವನಿಗೆ ಜಯ ನಿಶ್ಚಯ ಎಂದು ಮನದಲ್ಲೇ ಅಡಿಗಡಿಗೆ ಸಂತಸ ಪಟ್ಟನು , ಅಷ್ಟರಲ್ಲಿ ರಥವು ದೊಪ್ಪನೆ  ಮೊದಲಿನಂತೆ ಪುನ: ಕೆಸರಪಾಲಾಯಿತು .ತನ್ನ ಬಲವನ್ನೆಲ್ಲಾ ಬಾಣಗಳಿಗೆ  ಪ್ರಯೋಗಿಸುವ ಬದಲು ರಥವನ್ನು ಮೇಲಕ್ಕೆತ್ತಲು ಪ್ರಯೋಗಿಸಿದನು .ವೀರ ಕರ್ಣನ ಸಾಹಸವನ್ನು ಧರೆಯೇ ನುಂಗಿತು .ಸಾರಥಿಯಾದವನು  ನನ್ನಂತಹ  ಮಹಾರಥಿಗೆ ಸಲಹೆ ಕೊಡಬಾರದೆಂದು ಅವಮಾನಿಸಿ ಶಲ್ಯನನ್ನು   ಅಟ್ಟಿದೆ ,ಬಹುಶ: ಶಲ್ಯನು  ಸಾರಥಿಯಾಗಿರುತಿದ್ದರೆ ತನ್ನ ನೈಪುಣ್ಯತೆಯಿಂದ ರಥವನ್ನು ಈ ಹೂಳು ತುಂಬಿದ ಜಾಗದಿಂದ  ತಪ್ಪಿಸುತಿದ್ದನೇನೋ ..ಎಂದು ಕರ್ಣನು ಅಡಿಗಡಿಗೆ  ಮರುಗಿದನು .

ಇಳುಹಿದನು  ರಥದೊಳಗೆ  ಚಾಪವ
ನಳವಡಿಸಿದನು  ಸೆರಗಿನಲ್ಲಿಂ  
ದಿಳಿದು   ಗಾಲಿಯನಲುಗಿ ಪಾರ್ಥನನೋಡಿ ನಸುನಗುತ
ಎಲೈ  ಧನಂಜಯ ಸೈರಿಸುವುದರೆ
ಗಳಿಗೆಯನು ರಥವೆತ್ತಿ  ನಿನಗಾ
ನಳವಿಗೊಡುವೆನು ತನ್ನ ಪರಿಯನು  ಬಳಿಕ ನೋಡೆಂದ  ||

ರೂಢಿಸಿದ ಭಟ ನೀನು ಪ೦ಥದ
ಪಾಡುಗಳ ಬಲ್ಲವನು    ಶಾಸ್ತ್ರವ
ಖೋಡಿಗಳೆವವನಲ್ಲ ಲೌಕಿಕ  ವೈದಿಕ ಸ್ಥಿತಿಯ
ನಾಡೆ ಬಲ್ಲಿರಿ  ಶಸ್ತ್ರ ಹೀನರ
ಕೂಡೆ  ವಾಹನ ಹೀನರಲಿ ಕೈ
ಮಾಡಲನುಚಿತವೆಂಬ   ಮಾರ್ಗವನೆಂದನಾ   ಕರ್ಣ  ||




ಎಲೈ ಧನಂಜಯ ಗುರುವನ್ನು ಮೀರಿದ ಪ್ರತಿಭೆ ನಿನ್ನದು  ಭೀಷ್ಮ  ದ್ರೋಣರನ್ನು ಸೋಲಿಸಿದೆ ,ದಿನಕಳೆಯುದರೊಳಗೆ ಜಯದ್ರಥನ  ವಧೆ ಮಾಡದಿರೆ  ಅಗ್ನಿಗೆ  ಹಾರುವೆನೆಂದು  ಪ್ರತಿಜ್ನೆಯೂ ಆಯಿತು , ಇನ್ನೇನು  ಸೂರ್ಯ  ಮರೆಮಾಚುವನು ಎನ್ನುವಷ್ಟರಲ್ಲಿ  ಅವನ ತಲೆ ನಿನ್ನ ಬಾಣಗಳಿಗೆ ಆಹುತಿಯಾದವು.  ಗೋ ಗ್ರಹಣ ದಲ್ಲಿಯೂ  ಎಲ್ಲರನ್ನೂ ಮಣ್ಣು ಮುಕ್ಕಿಸಿದೆ.
ನನ್ನ ರಥವು ಕೆಸರಲ್ಲಿ ಹೂತು ಹೋಗಿದೆ, ಚಾಣಕ್ಷ ಸಾರಥಿಯಾದಂಥ ಶಲ್ಯ ನಿಂದ ದೂರನಾದೆ, ನಾನು ಈಗ ಶಸ್ತ್ರ ಹೀನನಾಗಿದ್ದೇನೆ,

ಏಸು ಮರುಳೆ  ಗಾಂದೀವಿಯಾಪ
ತ್ತೆಸಗಿದಾಗಲೇ  ಹಗೆಯ ಗೆಲುವುದು.

 .......ಮುಂದುವರಿಯುವುದು    ..,





  





Wednesday 12 October 2011

' ಸ್ಯಾಂಡ್ ವಿಚ್ ' ಪಾಲಿಸಿಯನ್ನ ಅಳವಡಿಸಿದ್ದೀವಾ ..?

                       ' ಸ್ಯಾಂಡ್  ವಿಚ್ '  ಪಾಲಿಸಿಯನ್ನ  ಅಳವಡಿಸಿದ್ದೀವಾ ..?          

ನನ್ನ  ಬಗ್ಗೆ  ಗೊತ್ತುಂಟಲ್ಲ  ಏನಿದ್ರೂ  ನೇರವಾಗಿಯೇ ಹೇಳೋದು  ಹೀಗೆ  ಹೇಳಿಯೇ ದಿನವನ್ನ ಆರಂಭಿಸುತ್ತಾರೆ !  ವಾಸ್ತವವಾಗಿ ನೇರವಾಗಿ ಹೇಳೋದರಿಂದ  ತಾನು ನೇರವಾಗಿದ್ದೀನಿ, ನಿಂತರ ನೇರವಾಗಿ ಇಲ್ಲದೊಂತರ ಅಲ್ಲ ಎಂಬರ್ಥದಲ್ಲಿ ಮಾತನಾಡುತ್ತಾರೆ .ಅಷ್ಟಕ್ಕೂ  ಅವರು ನೇರವಾಗಿ ಹೇಳೋದು  ಇನ್ನೊಬ್ಬರ ಬಗ್ಗೆ ಟೀಕೆಗಳನ್ನ ಹೊರತು  ಅವರ ಬಗ್ಗೆ ಅಲ್ಲವೇ ಅಲ್ಲ.ಹೀಗೆ ಇನ್ನೊಬ್ಬರ ಟೀಕೆ ಮಾಡಿದಾಗ ತಾನೊಬ್ಬ  ಸಭ್ಯ ಮನುಷ್ಯನಾಗುವೆನೆ೦ದೂ ಇರುತ್ತದೆ . ಅಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗುವೆನೆಂದೂ ಅನಿಸಿರುತ್ತಾರೆ . ಇಂತವರೆ ಹಾಗೆ  ಇನ್ನೊಬ್ಬರ ಅಭಿಪ್ರಾಯಕ್ಕೆ ಸ್ಪಂದಿಸದ , ತನ್ನ ಅಭಿಪ್ರಾಯಕ್ಕೆ ಮಾತ್ರ ಅಂಟಿಕೊಂಡು  ಬದಲಾಗದ ಹಳೇ  ಪ್ರಾವಿಶನ್ ಷ್ಟೊರು ತರ ಇರುತ್ತಾರೆ . ಅಂಗಡಿಯಲ್ಲಿ ಟೀವಿ  ಇಟ್ಟು ಗಿರಾಕಿಗಳನ್ನ ಕರೆಸಿ  ಅಂದರೆ ಸಾಕು 'ಶು೦ಠಿ  ತಗೊಳ್ಳೋಕೆ  ಗಿರಾಕಿಗಳು ಬರೋದು,ಟೀವಿ ನೋಡೋಕೆ ಅಲ್ಲ ' ಅಂತಾರೆ ಅಂಗಡಿಯಲ್ಲಿ  ಇನ್ನೂ ಶು೦ಠಿ ಗಳನ್ನ ದಾಸ್ತಾನು ಮಾಡಿ ಹಳೇ ಶು೦ಠಿ ಯನ್ನ  ಗಿರಾಕಿಗೆ ಕೊಡುತ್ತಾರೆ! ನಮ್ಮ ಪಾಲಿಸಿಗಳನ್ನ ಬದಲಾವಣೆ ಮಾಡದ ಹೊರತು ಜೀವನದಲ್ಲೂ ಬದಲಾವಣೆಯಾಗಿರುವುದಿಲ್ಲ.

ಟೀಕೆ  ನಮ್ಮ ತೀಟೆ ಗೋಸ್ಕರ ಉಪಯೋಗಿಸುವುದಲ್ಲ , ಅನವಶ್ಯಕ ಕಿರಿಕ್ಕನ್ನು ಉಂಟು  ಮಾಡಬಾರದು , ಟೀಕೆಯನ್ನು ಕೇಳಿಸಿದವನಲ್ಲಿ ಕಿರಿ ಕಿರಿ ಉಂಟಾದರೆ ಆ ಟೀಕೆ ಎಳ್ಳಷ್ಟು ಉಪಯೋಗವಿಲ್ಲ ಸಂಪೂರ್ಣ   ವ್ಯರ್ಥ.ಟೀಕೆಯನ್ನ ಸಂಪೂರ್ಣ ಪರಿಣಾಮಕಾರಿಯನ್ನಾಗಿಸಬೇಕು .  
ಅಭಿಪ್ರಾಯ ಹೇಳುವ ಮುನ್ನ  ಒಮ್ಮೆ ಯೋಚಿಸಬೇಕು   ಅಭಿಪ್ರಾಯ ಹೇಳಲು ನಮ್ಮ ಪಾತ್ರವೇನು?  ಇದು ಸಂಧರ್ಭನಾ? ಹೇಳದೆ ಇದ್ದರೆ   ಏನಾಗಬಹುದು? ಹೇಗೆ ಹೇಳಬೇಕು ?

ಅಭಿಪ್ರಾಯ  ಹೇಳುವ   ವಿಧಾನದಲ್ಲಿ,ಟೀಕೆ ಮಾಡುವಲ್ಲಿ  ಎಡವಿದರೆ  ಸಾಕು ನಮ್ಮ ಸಂಬಂಧಗಳು  ಎಕ್ಕುಟ್ಟಿ ಹೋಗಲು ಶುರುವಾಗುತ್ತದೆ.  'ಹಳಸಿದ  ರುಚಿ ಸಾಂಬಾರಿಗಿದೆ,ಒಂದು ದಿನವೂ ಸಾಂಬಾರು ತಿನ್ನೋತರ ಆಗಿಲ್ಲ'  'ಇಲ್ಲದ ರಾಗದಲ್ಲಿ ಹಾಡಿದ್ದೀಯ ಕೇಳೋನು ಯಾರು'  'ನೀನೊಬ್ಬ ವಿಚಿತ್ರ ಮನುಷ್ಯ'..ಹೀಗೆ ಟೀಕೆಗಳು...ಇಲ್ಲಿ ಸಾಂಬಾರು  'ಹಳಸು'ವುದಕ್ಕಿ೦ತಲೂ  ಸಂಭಂಧಗಳೇ ಹಳಸಲು ಶುರುವಾಗುತ್ತದೆ ,ಇಲ್ಲದ ರಾಗಕ್ಕಿಂತ ಇರುವ ರಾಗವೇ ಮುಂದೆ ಕಷ್ಟ ವಾಗುತ್ತದೆ , ವಿಚಿತ್ರ ಮನುಷ್ಯ ಇನ್ನೂ ಚಿತ್ರ ವಿಚಿತ್ರ ನಾಗುತ್ತಾನೆ .

ಟೀಕೆಯ ಮುನ್ನ  'ಸ್ಯಾಂಡು ವಿಚ್' ನ ನೆನೆಯಬೇಕು  ಅದರ ಮೇಲಿನ ಪದರ ಮೃದುವಾದ  ಬ್ರೆಡ್ ನಿಂದ ಕೂಡಿದೆ ,ಕೆಳಗೂ ಮೆತ್ತಗಿನ ಬ್ರೆಡ್ ಹಾಸಿದ್ದಾರೆ  ಇರಬೇಕಾದ ತಿರುಳು ,ಮಸಾಲೆ ಇದರ ಮಧ್ಯದಲ್ಲಿ ಇಟ್ಟು   ಬೆಚ್ಚಗೆ  ಮಾಡುತ್ತಾರೆ . ಬರೀ ತಿರುಳು ಮತ್ತು ಮಸಾಲೆ ತಿನ್ನೋದಕ್ಕೆ ,ಕರಗಿಸಿ ಕೊಳ್ಳೋದಕ್ಕೆ ಕಷ್ಟ .
ಮೊದಲು ಟೀಕೆಯಲ್ಲಿ  ಧನಾತ್ಮಕ ಅಂಶಗಳು ,ಕೊನೆಗೂ ಟೀಕೆಯಲ್ಲಿ ಧನಾತ್ಮಕ ಅಂಶಗಳು ,ಇದರ ಮಧ್ಯದಲ್ಲಿ ಹೇಳಬೇಕಾದ ಅಭಿಪ್ರಾಯಗಳನ್ನು ತುಂಬಿ  ಸ್ಯಾಂಡ್ ವಿಚ್ ತರ ಇದ್ದರೆ  ಅರಗಿಸಿ ಕೊಳ್ಳ ಬಹುದಲ್ವಾ..?



Saturday 1 October 2011

ಮನಸಿಗೂ 'ಬೆಸ್ಟ್ ಪ್ರ್ಯಾಕ್ಟೀಸಸ್ ' ಅ೦ತ ಇದಿಯಾ..?

                       ಮನಸಿಗೂ  ' ಬೆಸ್ಟ್ ಪ್ರ್ಯಾಕ್ಟೀಸಸ್  '    ಅ೦ತ ಇದಿಯಾ..?
ವಿಶಾಲವಾದ  ಮನೆಯಿದ್ದು ಅಲ್ಲಿ ನ  ಸ್ಟೊರು ರೂಮನ್ನು ಉಪಯೋಗಿಸದಿದ್ದರೆ ಮನೆಯಲ್ಲಿನ ಇತರ ರೂಮುಗಳೇ ಸ್ಟೊರ್ ರೂಮು ಆಗುತ್ತದೆ. ಅಲ್ಲಿಡಬೇಕಾದ ಬಕೆಟು ಈ ರೂಮಿಗೆ ಬ೦ದಿರುತ್ತದೆ, ಅಲ್ಲಿಡ ಬೇಕಾದ ಪೊರಕೆ ಇದೇ ರೂಮಲ್ಲಿ ನಮ್ಮನ್ನ ಇಣಕಿ ನೋಡುತಿರುತ್ತದೆ!  ಕುರ್ಚಿಯ  ಮೇಲೆ  ಕೂರಬೇಕಾದ ನಾವು  ಉದ್ದುವ ಬಟ್ಟೆಯ ಮೇಲೆ ಕೂತು ಕೊಳ್ಳುತ್ತೀವಿ, ಗಾರ್ಡನ್ ಗೆ ಬೇಕಾದ ಕತ್ತರಿಯೊ೦ದಿಗೆ ಮಗುವು ಆಟವಾಡುತ್ತಾ ಇರುತ್ತದೆ ,ಮು೦ದೆ ಬೇಕಾದೀತು ಎ೦ದಿಟ್ಟ ಬಳ್ಳಿ  ಜಗಲಿ ಮಧ್ಯದಲ್ಲಿ ಸಿಕ್ಕು ಹಾಕಿ ಕೊ೦ಡಿರುತ್ತದೆ ,ಅಗರು ಬತ್ತಿಯ ಪಕ್ಕದಲ್ಲೇ ಹಳೆ ಫಿನೈಲ್ ಇರುತ್ತದೆ ...
ಒಬ್ಬ್ಬ  ತನ್ನ  ದೇಹದ  ಬಗ್ಗೆ  ಅಸಡ್ಡೆ  ಇರುವ   ಜವಾನ ಗಿರಣಿಯಲಿರುವ ತು೦ಬಿದ ಗೋಣಿಯ೦ತಾಗಿರ್ತಾನೆ  ,
ಸಮಯದ  ಬಗ್ಗೆ ಗೊಡವೆಯೇ ಕೊಡದವನು  ಮಾಡಬೇಕಾದ ಕೆಲಸವನ್ನು ಆ ದಿವಸ ಮಾಡುವುದೇ ಇಲ್ಲ .
ಲೆಕ್ಕ ಪತ್ರಗಳನ್ನ ನೋಡದೆ  ಇರುವವನನನ್ನ  ಸಾಲಗಾರರೆ ಆಳುತಿರುತ್ತಾರೆ .

ಮನೆಯನ್ನ  ಓರಣವಾಗಿಡುವುದು , ದೇಹದ ಬಗ್ಗೆ ಶ್ರದ್ದೆ ವಹಿಸಿ ವ್ಯಾಯಾಮ ಮಾಡಿ  ಒ೦ದು ಆಯಾಮ ಕೊಡುವುದು , ಕೆಲಸ ಕಾರ್ಯದ ಬಗ್ಗೆ ಸಮಯದ  ಬಗ್ಗೆ ನಿಗಾ ಇಡೋದು ,ಲೆಕ್ಕ ಪತ್ರಗಳಲ್ಲಿ ಗಮನ ಹರಿಸುವುದು   ಇದೆಲ್ಲ ನಮ್ಮ ದೈನ೦ದಿನ ಜೀವನದ   ' ಬೆಸ್ಟ್ ಪ್ರ್ಯಾಕ್ಟೀಸಸ್ '   ಗಳು    ಅವು ನಮ್ಮ ಜೀವನದ  ಫಲವತ್ತತೆಯನ್ನ ಹೆಚ್ಚಿಸುತ್ತದೆ.

ಇದು  ಮನಸಿಗೂ    ' ಬೆಸ್ಟ್ ಪ್ರ್ಯಾಕ್ಟೀಸಸ್ '  ಬೇಡ್ವಾ ..? 

ನಮ್ಮ ಸ೦ಬ೦ಧಗಳು  ಬಿರುಕು  ಬಿಡುವುದೇ   ಮಾನಸಿಕ  ಅಸಮತೋಲನದಿ೦ದ   .., ಅವನಿಗೆ ತಿರುಗಿಸಿ ಬೈಯಲಿಲ್ಲವಲ್ಲಾ  ಎ0ದು ದಿನವಿಡೀ  ವ್ಯರ್ಥ ವಾಗುತ್ತದೆ  !  ಅವನಿ೦ದ ಬೈಸಿಕೊ೦ಡೆನಲ್ಲಾ  ಎ೦ದೂ  ಆ ದಿನ ವ್ಯರ್ಥ ವಾಗುತ್ತದೆ , ಎಲ್ಲರ ಮು೦ದೆ ನಕ್ಕನಲ್ಲಾ, ನನ್ನ ಚಿಕ್ಕ ಮಾತಿಗೆ ಅಷ್ಟೊ೦ದು ಸಿಟ್ಟು ಮಾಡಿದನಲ್ಲಾ   ಎ೦ದೂ  ಮು೦ದಿನ ದ್ವೇಷಕ್ಕೆ ಬುನಾದಿಯಾಗುತ್ತದೆ  ನಮ್ಮ ಮನಸಿನ ಭಾವನೆ ಗಳನ್ನ ಒರಣವಾಗಿರಿಸದಿದ್ದರೆ, ಮನಸನ್ನು ಆಯಮವಾಗಿರಿಸದಿದ್ದರೆ  ದಿನವೇ ವ್ಯರ್ಥವಾದ೦ತೆ  ಮು೦ದಿನ ಯೋಜನೆಗಳೇ ಯಾಕೋ ನಾವು ತಿಳಿದ೦ತೆ ಸಾಗೊದೆ ಇಲ್ಲ .

 ಇನ್ನೊಬ್ಬರಿಗೆ ಬೈಯೋದು ತಪ್ಪು  ಅ೦ತ ಎಲ್ಲರೂ ಹೇಳಿರುತ್ತಾರೆ  ಆದರೂ ಅದನ್ನ ಕೇಳಿ ಕೇಳಿಯೂ  ಕಡಿಮೆ ಮಾಡಿಲ್ಲ ..
ವಾಸ್ತವವಾಗಿ ಹೇಗೆ ಬೈಯ್ಯೋದು ತಪ್ಪೋ   ಹಾಗೆ ಬೈಯ್ಯದೆ ಇರುವುದೂ ತಪ್ಪೇ  ನಗದೆ ಇರುವುದೂ ತಪ್ಪೇ ಅಳದೆ ಇರುವುದೂ ತಪ್ಪೇ ..ನಾವು  ಅರೆ ತಾಳ್ಮೆಯಿ೦ದಲೋ , ಅರೆಧ್ಯಾನದಿ೦ದಲೋ  ಅರೆಬುದ್ಧಿವ0ತಿಕೆಯಿ0ದಲೋ  ಮನಸಿನ ಭಾವನೆಯನ್ನ ಅದುಮಿ ಇಡುತ್ತೀವಿ (supress ಮಾಡಿರುತ್ತೀವಿ ) ಅದಕೆ ಅದು ಯಾವತ್ತೋ ಒ೦ದು ದಿನ ಸ್ಪೋಟಗೊ೦ಡು  ನಾವು ಒಬ್ಬ ಮೂಡಿ  ಅ೦ತ ಪಟ್ಟ ಕಟ್ಟಿರುತ್ತಾರೆ.  ಭಾವನೆಗಳೇ ಹಾಗೆ ಅದಕೆ ಪ್ರಚ್ಛನ್ನ ಶಕ್ತಿ  (potential  energy) ಇದೆ ಅದನ್ನ ಹರಿಯಲು ಬಿಡಲೇ ಬೇಕು.
ಸಿಟ್ಟು ಬ0ದಾಗ ತೀಟೆ ತೀರುವಷ್ಟು ಬೈದು ಬಿಡಿ ,ನಗು ಬ0ದಾಗ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಬಿಡಿ , ಅಳು ಬ೦ದಾಗ ಹಗುರವಾಗುವಷ್ಟು ಅತ್ತು ಬಿಡಿ ; ನೆನಪಿರಲಿ  ನಮ್ಮಕೈಯ್ಯಿ೦ದ  ಬೈಸಿಕೊ೦ಡವರು , ನಗೆಸಿಕೊ೦ಡವರು,ನಮಗೆ ಅಳು ಬರೆಸಿದವರು  ಯಾರು  ಆ ರೂಮಲ್ಲಿರಬಾರದು ! ಹಾಗ೦ತ  ಬೇರೊಬ್ಬರೂ ಇರಲೂಬಾರದು ! ಎಲ್ಲವೂ ನಮ್ಮ ಮತ್ತು ಗೋಡೆ ಮಧ್ಯನೇ ಇರಲಿ . 
ಸತ್ಯವಾಗಲೂ ಹೇಳಲಾ  ಮೀಸೆ ಬ0ದ ಹುಡುಗನಿಗಾಗಲಿ,  ಮೊಡವೆ ಬ೦ದ ಮೇಲೆ ಹುಡುಗಿಗಾಗಲಿ ಬೈಯೋದರಿ೦ದ ಫಾಯಿದೇನೆ ಇಲ್ಲ . ಹಾಗ೦ತ ಹೇಳಬೇಕಾದನ್ನ  ಹೇಳದೆ ಇರಬಾರದಲ್ವಾ ?..
ರೂಮಿನಲ್ಲಿ  ಭಾವನೆಗಳನ್ನ  ಸಮತೋಲನ ಕ್ಕೆ ತ೦ದ ನ೦ತರ  ಬೈಯ್ಯ  ಬೇಕಾದ್ದನ್ನ ಹೇಳಿ .., ನಗಬೇಕಾದದನ್ನ ನಿಯ೦ತ್ರಿಸಿ, ಅಳಬೇಕಾದದನ್ನ  ದು:ಖಿಸಿ .ಇದು  'ಬೆಸ್ಟ್ ಪ್ರ್ಯಾಕ್ಟೀಸಸ್ '  ಆಲ್ವಾ..?  ಆ ದಿವಸ  ಕೆಲಸಗಳು ನಮಗೆ ಸ0ಪೂರ್ಣ ವಾಗಿಸುತ್ತದೆ ಮು೦ದೆಯೂ  ನಮ್ಮ ಯೋಜನೆಗಳನ್ನ  ಫಲಕಾರಿಯನ್ನಾಗಿಸುತ್ತದೆ.